ಮೂರನೆಯ ಮೈಸೂರು ಯುದ್ಧ (1790) ಮೈಸೂರು ರಾಜ್ಯಕ್ಕೂ ಬ್ರಿಟಿಷರಿಗೂ ನಡೆದ ಯುದ್ಧ. ನಾಲ್ಕು ಬಾರಿ ನಡೆದ ಯುದ್ಧ ಸರಣಿಯಲ್ಲಿ ಇದು ಮೂರನೆಯದು. ಫ್ರೆಂಚರೊಂದಿಗೆ ಮೈತ್ರಿಯಿದ್ದ ಮೈಸೂರಿನ ರಾಜ ಟಿಪ್ಪು ಸುಲ್ತಾನನು ಬ್ರಿಟಿಷ್ ಅಧೀನದಲ್ಲಿದ್ದ ಟ್ರಾವಂಕೂರಿನ ಮೇಲೆ 1789 ರಲ್ಲಿ ದಂಡೆತ್ತಿ ಹೋದನು. ಆಗ ಪ್ರಾರಂಭವಾದ ಯುದ್ಧ ಮುಂದಿನ ಮೂರು ವರ್ಷಗಳವರೆಗೆ ಮುಂದುವರೆದು ಟಿಪ್ಪೂ ಸುಲ್ತಾನನ ಪರಾಭವದೊಂದಿಗೆ ಪರ್ಯವಸಾನಗೊಂಡಿತು. ತಮ್ಮದೇ ದೇಶದ ಫ್ರೆಂಚ್ ಕ್ರಾಂತಿಯನ್ನು ಎದುರಿಸುವುದರಲ್ಲಿ ಮಗ್ನರಾದ ಫ್ರೆಂಚರು , ಬ್ರಿಟಿಷರ ನೌಕಾದಳದಿಂದಲೂ ಹಿಮ್ಮೆಟ್ಟಿಸಲ್ಪಟ್ಟುದರಿಂದ , ಟಿಪ್ಪು ಸುಲ್ತಾನನ ನಿರೀಕ್ಷೆಯಂತೆ ಬೆಂಬಲ ನೀಡಲಿಲ್ಲ. ಟಿಪ್ಪು ಸುಲ್ತಾನ ರಾಕೆಟ್ಟುಗಳ ಪಡೆಯಿಂದ ಧಾಳಿ ಮಾಡಿದ್ದು ಈ ಯುದ್ಧದ ಹೆಗ್ಗಳಿಕೆ. ಈ ಧಾಳಿಯ ಪರಿಣಾಮ ನೋಡಿ ಮಾರುಹೋದ ಬ್ರಿಟಿಷ್ ವಿಜ್ಞಾನಿ ವಿಲಿಯಮ್ ಕಾಂಗ್ರೀವನು ಮುಂದೆ ಕಾಂಗ್ರೀವ್ ರಾಕೆಟುಗಳನ್ನು ಸಂಶೋಧಿಸಿದನು. ಈ ಯುದ್ಧದ ಪರಿಣಾಮವಾಗಿ ಟಿಪ್ಪುವು ತನ್ನ ರಾಜ್ಯದ ಕೆಲ ಭಾಗಗಳನ್ನು ಬ್ರಿಟಿಷರ ಬೆಂಬಲಿಗರೋ , ಏಜಂಟರೋ ಆಗಿದ್ದ ಮರಾಠರು, ಹೈದರಾಬಾದಿನ ನಿಜಾಮ ಮತ್ತು ಮದ್ರಾಸ್ ಪ್ರೆಸಿಡೆನ್ಸಿಗಳವರಿಗೆ ಹಂಚಿಕೊಡಬೇಕಾಗಿ ಬಂದು , ಇದರಿಂದ ಮೈಸೂರು ರಾಜ್ಯದ ವಿಸ್ತೀರ್ಣ ತೀವ್ರವಾಗಿ ಕುಸಿಯಿತು. ಮಲಬಾರ್‍, ಸೇಲಂ, ಬಳ್ಳಾರಿ ಮತ್ತು ಅನಂತಪುರ ಜಿಲ್ಲೆಗಳು ಮದ್ರಾಸ್ ಪ್ರೆಸಿಡೆನ್ಸಿಗೆ ಸೇರಿಹೋದವು. ಈ ಯುದ್ಧದ ಕೊನೆಯಲ್ಲಿ ಶ್ರೀರಂಗಪಟ್ಟಣದ ಒಪ್ಪಂದವಾಗಿ, ಅದರ ಪ್ರಕಾರ ಟಿಪ್ಪು ತನ್ನ ಅರ್ಧ ರಾಜ್ಯವನ್ನು ಬ್ರಿಟಿಷರಿಗೆ ಒಪ್ಪಿಸಿದ್ದಷ್ಟೇ ಅಲ್ಲದೇ , ತನ್ನಿಬ್ಬರು ಮಕ್ಕಳನ್ನು ಬ್ರಿಟಿಷರಲ್ಲಿ ಒತ್ತೆ ಇಡಬೇಕಾಗಿ ಬಂದಿತು. == ನೋಡಿ == ಒಂದನೆಯ ಮೈಸೂರು ಯುದ್ಧ | ಎರಡನೆಯ ಮೈಸೂರು ಯುದ್ಧ | ಮೂರನೇ ಮೈಸೂರು ಯುದ್ಧ | ನಾಲ್ಕನೆಯ ಮೈಸೂರು ಯುದ್ಧ | ಟಿಪ್ಪು ಸುಲ್ತಾನ್ | ಲಾರ್ಡ್ ಕಾರ್ನ್‍ವಾಲಿಸ್ == ಉಲ್ಲೇಖ ==